ಚಿತ್ರದುರ್ಗ: ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಬೋನು ಸ್ವಚ್ಛಗೊಳಿಸುವಾಗ ತಪ್ಪಿಸಿಕೊಂಡಿದ್ದ ಚಿರತೆಯನ್ನು 3 ತಾಸುಗಳ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಯಿಡಿದಿದ್ದಾರೆ.
ಬೋನು ಸ್ವಚ್ಛಗೊಳಿಸಲು ಮೃಗಾಲಯದ ಸಿಬ್ಬಂದಿ ರಾಮಾಂಜನೇಯ ಭಾನುವಾರ ಬೆಳಗ್ಗೆ 7.30ರಲ್ಲಿ 4 ವರ್ಷದ ಚಿರತೆ ‘ಭೀಮ’ನನ್ನು ಬೇರೊಂದು ಬೋನಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆ ಬೋನಿನ ಬಾಗಿಲನ್ನು ಸರಿಯಾಗಿ ಹಾಕಿರಲಿಲ್ಲ.
ಬೆಳಗ್ಗೆ ಮೃಗಾಲಯಕ್ಕೆ ಬಂದಿದ್ದ ಪ್ರವಾಸಿಗಳು, ಚಿರತೆ ಕಂಡು ದಿಕ್ಕಾಪಾಲಾಗಿ ಓಡಿದರು. ಚಿರತೆಯೂ ಕಂಗಾಲಾಗಿ ಮೃಗಾಲಯದ ಬಳಿಯೇ ಇದ್ದ ಚರಂಡಿಯಲ್ಲಿ ಬಿದ್ದು ಬಳಿಕ ಪೊದೆಗೆ ನುಗ್ಗಿ ಅವಿತು ಕುಳಿತಿತ್ತು.
ತಕ್ಷಣವೇ ಮೃಗಾಲಯದ ಸಿಬ್ಬಂದಿ ನಗರಕ್ಕೆ ಧಾವಿಸಿ ಹಂದಿ ಹಿಡಿಯುವವರನ್ನು ಕರೆದೊಯ್ದು ಚಿರತೆ ಸೆರೆಗೆ ಬಲೆ ಬೀಸಿದ್ದಾರೆ. 3 ತಾಸಿನ ಬಳಿಕ ಪೊದೆಯಿಂದ ಹೊರಬಂದಾಗ ಅದನ್ನು ಸೆರೆಹಿಡಿದಿದ್ದಾರೆ.
ಇದರಿಂದ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ.