ಶ್ರೀ ಸಿದ್ಧಿ ಗಣೇಶಾಯ ನಮಃ
ಶ್ರೀ ಸಿದ್ಧಿ ವಿನಾಯಕ ವ್ರತ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ
ಕೈಲಾಸವೆಂಬ ಪಟ್ಟಣದೊಳಗೆ ಪಾರ್ವತಿ ಪರಮೇಶ್ವರರು ವಿನೋದಕ್ಕಾಗಿ ಪಗಡೆಯಾಟವನ್ನು ಆಡುತ್ತಿದ್ದರು. ಮತ್ತು ಯಾರು ಸೋಲುತ್ತಾರೆ ಎಂಬುದನ್ನು ನೋಡುವುದಕ್ಕಾಗಿ ಪಾರ್ವತಿಯು ಅನಂತವೆಂಬ ಗೊಂಬೆಯನ್ನು ಸೃಷ್ಠಿ ಮಾಡಿ, ತಾವು ಆಡುತ್ತಿರುವ ಆಟದಲ್ಲಿ ಸೋತವರು ಯಾರು ಮತ್ತು ಗೆದ್ದವರು ಯಾರು ನೋಡಿ ಹೇಳಬೇಕೆಂದು ಆಜ್ಞಾಪಿಸಿದಳು.
ಪಗಡೆ ಆಡುತ್ತಿರುವಾಗ ಪಾರ್ವತಿಯು ಗೆಲ್ಲುತ್ತಿರಲು ಪರಮೇಶ್ವರನು ಸೋಲುತ್ತಿರಲು ಆಟವೆಲ್ಲವೂ ಮುಗಿದ ನಂತರ ಪಾರ್ವತಿಯು ನಾನು ಗೆದ್ದೆನು. ನೀವು ಸೋತಿರುವಿರಿ ಎನ್ನಲು ಪರಮೇಶ್ವರನು ಪಾರ್ವತಿಗೆ ನಾನು ಗೆದ್ದಿದ್ದೇನೆ ನೀನು ಸೋತಿರುವೆ ಎಂದು ಹೇಳಿದನು.
ಅದಕ್ಕೆ ಪಾರ್ವತಿಯು ತಾನು ಆಜ್ಞೆ ಇತ್ತ ಅನಂತವೆಂಬ ಗೊಂಬೆಯನ್ನು ಕೇಳಿ ತಿಳಿಯುವುದು ಎಂದು ನಿರ್ಧರಿಸಿ, ಅನಂತವೆಂಬ ಗೊಂಬೆಗೆ ಗೆದ್ದವರು ಯಾರು? ಸೋತವರು ಯಾರು ? ನಿಜಸ್ಥಿತಿಯನ್ನು ಹೇಳು ಎಂದು ಆಜ್ಞಾಪಿಸಲು ಅದಕ್ಕೆ ಅನಂತವೆಂಬ ಗೊಂಬೆಯು ಮನಸ್ಸಿನಲ್ಲಿ ಆಲೋಚನೆ ಮಾಡುವಂತವನಾದನು.
ಅದೇನೆಂದರೆ ಲೋಕದಲ್ಲಿ ಹೆಂಗಸರು ಗೆದ್ದರೆ ಗಂಡಸರಿಗೆ ಸೋತದ್ದಕ್ಕೆ ಅಪಹಾಸ್ಯಕ್ಕೆ ಕಾರಣವಾಗುವುದೆಂದು ಬಗೆದು ಪರಮೇಶ್ವರನು ಗೆದ್ದಿದ್ದಾರೆ. ಪಾರ್ವತಿಯು ಸೋತಿದ್ದಾರೆ ಎಂದು ಸುಳ್ಳು ಹೇಳಿತು.
ಇದನ್ನು ಕೇಳಿ ಪಾರ್ವತಿಗೆ ಸಹಿಸಲಾರದಷ್ಟು ಕೋಪ ಬಂದು, ಎಲೈ ಅನಂತವೆಂಬ ಗೊಂಬೆಯೆ ಆಟದಲ್ಲಿ ಸೋತವರಿಗೆ ಸೋತಿರುವಿರೆಂದು ಹೇಳದೇ ಸುಳ್ಳು ಹೇಳಿದ್ದಕ್ಕೆ ನಿನಗೆ ಪೂರ್ಣ ಕುಷ್ಟರೋಗ ಬರಲಿ ಎಂದು ಶಾಪ ಕೊಟ್ಟಳು. ಶಾಪಗ್ರಸ್ಥನಾದ ಅನಂತವೆಂಬ ಗೊಂಬೆಯು ಕೈಲಾಸದಿಂದ ನರಳುತ್ತಾ, ಉರುಳುತ್ತಾ ನರ್ಮದಾ ನದಿಯ ದಂಡೆಗೆ ಬಂದು ಬಿದ್ದಿತು. ಅಲ್ಲಿ ದೇವಕನ್ಯೆಯರು ಮತ್ತು ನಾಗಕನ್ಯೆಯರು ಶ್ರೀ ಸಿದ್ಧಿ ಗಣೇಶನ ವ್ರತ ಮಾಡುತ್ತಿದ್ದರು.
ಅವರು ಆ ಗೊಂಬೆಯನ್ನು ನೋಡಿ ಯಾರೋ ನರಮನುಷ್ಯ ಬಂದಿದ್ದಾನೆ. ನಾವು ಮಾಡತಕ್ಕ ಪೂಜಾ ಸಾಮಾನುಗಳನ್ನು ಮತ್ತು ದಾನವನ್ನು ಮುಚ್ಚಿಟ್ಟುಕೊಳ್ಳಿರಿ ಎಂದು ತಮ್ಮಲ್ಲೇ ಮಾತನಾಡುತ್ತಿದ್ದರು. ಇದನ್ನು ಕೇಳಿ ಅನಂತವೆಂಬ ಗೊಂಬೆಯು ಇಲ್ಲಮ್ಮಾ ನಾನೂ ನಿಮ್ಮ ಹಾಗೆ ದೇವ ಮನುಷ್ಯನಿದ್ದೇನೆ. ಪಾರ್ವತಿಯ ಶಾಪದಿಂದ ಈ ರೀತಿಯಾಗಿದೆ. ಅದನ್ನು ಕೇಳಿದ ದೇವ ಕನ್ಯೆಯರಿಗೆ ಮತ್ತು ನಾಗಕನ್ಯೆಯರಿಗೆ ಕನಿಕರ ಉಂಟಾಯಿತು.
ಅನಂತವೆಂಬ ಗೊಂಬೆಯು ದೇವಕನ್ಯೆ ಮತ್ತು ನಾಗಕನ್ಯೆಯರನ್ನು ಕುರಿತು ನೀವು ಮಾಡತಕ್ಕ ವ್ರತವು ಯಾವುದು ? ಏತಕ್ಕೋಸ್ಕರ ಮಾಡುತ್ತಿರುವಿರಿ ಎಂಬುದನ್ನು ತಿಳಿಸಿರಿ. ಅದನ್ನು ಕೇಳಿ ನಾಗಕನ್ಯೆ ಮತ್ತು ದೇವಕನ್ಯೆಯರು ನಿನಗೋಸ್ಕರವಾಗಿ ಹೇಳುತ್ತೇವೆ. ಲಕ್ಷೃವಿಟ್ಟು ಕೇಳಿ ತಿಳಿದುಕೊಳ್ಳುವಂತವನಾಗು ಎಂದು ಹೇಳಿ ಆ ವ್ರತವನ್ನು ಮತ್ತು ಅದರ ಫಲಗಳನ್ನು ಹೇಳುತ್ತಾರೆ.
ಶ್ರೀ ಸಿದ್ದಿ ಗಣೇಶನು ವಿದ್ಯೆ ಇಲ್ಲದವರಿಗೆ ವಿದ್ಯೆಯನ್ನು ದಯಪಾಲಿಸುತ್ತಾನೆ. ಮನಃಶಾಂತಿಯನ್ನು ದಯಪಾಲಿಸುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ನಾವುಗಳು ಲಗ್ನವಾಗದೇ ಇರತಕ್ಕಂತಹ ಕನ್ಯೆಯರು. ನಮಗೆ ಯೋಗ್ಯವಾದ ವರ ಬೇಕಾದ ಕಾರಣ ನಾವು ಈ ವ್ರತವನ್ನು ಮಾಡುತ್ತಿದ್ದೇವೆ.
ಇದೇ ಸಂದರ್ಭದಲ್ಲಿ ನೀನೂ ಕೂಡಾ ಈ ವ್ರತವನ್ನು ಆಚರಿಸುವಂತವನಾಗು ಅದರಿಂದ ನೀನು ಪಾರ್ವತಿಯ ಶಾಪದಿಂದ ವಿಮೋಚನೆಯಾಗುತ್ತಿ. ಇದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿ, ಶ್ರೀ ಸಿದ್ಧಿ ವಿನಾಯಕನ ವ್ರತವನ್ನು ಮಾಡುವ ವಿಧಾನವನ್ನು ಅನಂತವೆಂಬ ಗೊಂಬೆಗೆ ಹೇಳುವಂತವರಾದರು.
ಭಾದ್ರಪದ ಮಾಸದಲ್ಲಿ ಚವತಿಯ ದಿವಸ ವ್ರತಕ್ಕೆ ತಂದು. ಶ್ರೀ ಗಣೇಶನನ್ನು ಮಾಡಿ 21 ಕರಿಕೆಪತ್ರಿ, 21 ಮಂತ್ರಾಕ್ಷತೆ ಮತ್ತು 21 ಎಳೆದಾರದಿಂದ ಒಂದೇ ಮನಸ್ಸಿನಿಂದ 21 ದಿನಗಳವರೆಗೆ ವ್ರತ ಮಾಡಿ, ಸಕ್ಕರೆಯನ್ನಾಗಲಿ, ಆಕಳ ಹಾಲನ್ನಾಗಲಿ ಶ್ರೀ ಸಿದ್ಧಿ ಗಣೇಶನಿಗೆ ನೈವೇದ್ಯ ಮಾಡಬೇಕು. 21ನೇ ದಿವಸ ಆಕಳ ಹಾಲು, ಆಕಳ ಮೊಸರು, ಆಕಳ ತುಪ್ಪ, ಕಣಕ, ಬೆಲ್ಲ ಮತ್ತು ಕಡಲೇಬೇಳೆ ತಂದು 21 ಮೋದಕಗಳನ್ನ ಮಾಡಬೇಕು. ಒಂದು ಮೋದಕ ಗಣಪತಿಗೆ 10 ಮೋದಕ ಬ್ರಾಹ್ಮಣರಿಗೆ ಕೊಟ್ಟು 10 ಮೋದಕ ತಾವು ಸ್ವೀಕಾರ ಮಾಡಬೇಕು.
ಹೀಗೆ ಯಾರು ಈ ವ್ರತವನ್ನು ನಿಯಮದಂತೆ ಮಾಡುತ್ತಾರೋ ಅವರಿಗೆ ಶ್ರೀ ಸಿದ್ಧಿ ಗಣೇಶನು ಒಲಿದು ಆಯುರಾರೋಗ್ಯವನ್ನು ಕೊಟ್ಟು ರಕ್ಷಿಸುವನು. ಹೀಗೆ ಈ ವ್ರತದ ಕಥೆಯನ್ನು ಮತ್ತು ಅದರಿಂದ ಬರತಕ್ಕ ಫಲಗಳನ್ನು ಕೊಟ್ಟು ರಕ್ಷಿಸುವನು. ಹೀಗೆ ಈ ವ್ರತದ ಕಥೆಯನ್ನು ಮತ್ತು ಅದರಿಂದ ಬರತಕ್ಕ ಫಲಗಳನ್ನು ಅನಂತವೆಂಬ ಗೊಂಬೆಗೆ ದೇವಕನ್ಯೆಯರು ಮತ್ತು ನಾಗಕನ್ಯೆಯರು ಹೇಳಿದರು.
ಶ್ರೀ ಸಿದ್ಧಿ ಗಣೇಶನ ಮಹಿಮೆಯನ್ನು ಕೇಳಿ ತಾನೂ ಕೂಡ 21 ದಿವಸ ಶ್ರೀ ಸಿದ್ಧಿ ಗಣೇಶನ ವ್ರತ ಮಾಡುವದರೊಳಗಾಗಿ ಪಾರ್ವತಿಯ ಶಾಪದಿಂದ ಬಂದಿರತಕ್ಕಂತಹ ಕುಷ್ಠರೋಗ ಪೂರ್ಣ ಹೋಗಿ ಸಂಪೂರ್ಣ ದೇಹ ಬಂದಿತು. ಅವನು ಪಾರ್ವತಿಯ ಎದುರಿಗೆ ಬಂದು ನಿಂತನು.
ಇದೇನಪ್ಪ ನೀನು ಹೀಗೆ ಆದೇ ? ನಾನೆ ನಿನಗೆ ಶಾಪ ಕೊಟ್ಟಿದ್ದೆ ಅದು ಹೇಗೆ ವಿಮೋಚನೆ ಆಯಿತು. ? ಇದಕ್ಕೆ ಅನಂತನು ತಾಯಿ ಏನು ಹೇಳಲಿ ನಿನ್ನ ಶಾಪದಿಂದ ನರಳುತ್ತಾ, ಉರುಳುತ್ತಾ ನರ್ಮದಾ ನದಿಯ ದಂಡೆಗೆ ಹೋಗಿ ಬಿದ್ದೆ. ಅಲ್ಲಿ ದೇವಕನ್ಯೆಯರ ಮತ್ತು ನಾಗಕನ್ಯೆಯರು ಶ್ರೀ ಸಿದ್ದಿವಿನಾಯಕನ ವ್ರತವನ್ನು ಮಾಡುತ್ತಿದ್ದರು. ಅವರಿಂದ ನಾನು ಈ ವ್ರತವನ್ನು ಹೇಗೆ ಮಾಡಬೇಕೆಂದು ಕೇಳಿ ತಿಳಿದುಕೊಂಡೆನು.
ಈ ವ್ರತವನ್ನು 21 ದಿವಸ ಆಚರಿಸಿದೆನು. ಈ ವ್ರತದ ಪ್ರಭಾವದಿಂದ ನನ್ನ ಕುಷ್ಠರೋಗದ ದೇಹ ಹೋಗಿ ಸುವರ್ಣ ದೇಹ ಬಂದಿತು ಎಂದು ಹೇಳಿದನು. ಅದನ್ನು ಕೇಳಿ ಪಾರ್ವತಿಯು ಆ ವ್ರತವನ್ನು ಹೇಗೆ ಮಾಡಬೇಕು ? ನನಗೂ ವಿವರವಾಗಿ ಹೇಳು, ನಾನೂ ಆ ವ್ರತವನ್ನು ಮಾಡುತ್ತೇನೆ. ನನ್ನ ಮಗನಾದ ಷಣ್ಮುಖನು ದೇಶ ಸಂಚಾರಕ್ಕೆ ಹೋಗಿದ್ದಾನೆ. ಇನ್ನೂ ಬಂದಿಲ್ಲ ಎಂದಳು.
ಹೀಗೆ ಪಾರ್ವತಿಯು ಕೇಳಲು ಅದಕ್ಕೆ ಅನಂತವೆಂಬ ಗೊಂಬೆಯು ಪಾರ್ವತಿಗೆ ದೇವಕನ್ಯೆಯರಿಂದ ಕೇಳಿ ತಿಳಿದ ವ್ರತದ ಮಹಿಮೆಯನ್ನು ಮತ್ತು ಅದನ್ನು ಮಾಡುವುದರಿಂದ ಬರತಕ್ಕ ಫಲಗಳನ್ನು ಪಾರ್ವತಿಗೆ ಹೇಳುತ್ತಾನೆ. ಅನಂತವೆಂಬ ಗೊಂಬೆ ಹೇಳಿದ ಶ್ರಿ ಸಿದ್ಧಿ ಗಣೇಶನ ವ್ರತವನ್ನು ಏಕಚಿತ್ತದಿಂದ 21 ದಿನ ಪರ್ಯಂತರವಾಗಿ ಮಾಡುತ್ತಾಳೆ. 21ನೇಯ ದಿನ ಪೂಜೆ ಮುಗಿಯುವುದರೊಳಗಾಗಿ ದೇಶ ಸಂಚಾರಕ್ಕಾಗಿ ಹೋದಂತಹ ಷಣ್ಮುಖನು ಬಂದು ಪಾರ್ವತಿಯ ಎದುರಿಗೆ ನಿಲ್ಲುತ್ತಾನೆ. ಆಗ ಪಾರ್ವತಿಯು ಇದೇನಪ್ಪಾ, ನನ್ನ ಕಾರ್ಯವು ಸಿದ್ಧಿಯಾಯಿತು ಎಂದಾಗ, ಷಣ್ಮುಖನು ಅದೇನೆಂದು ಕೇಳಲು ಅದಕ್ಕೆ ಪಾರ್ವತಿಯು ನಿನ್ನ ವೃತ್ತಾಂತವನ್ನು ತಿಳಿಯುವುದಕ್ಕೋಸ್ಕರ ದೇವಕನ್ಯೆಯರು ಅನಂತವೆಂಬ ಗೊಂಬೆಗೆ ಹೇಳಿದ ಶ್ರೀ ಸಿದ್ಧಿ ಗಣೇಶನ ವ್ರತವನ್ನು ಅವನಿಂದ ಕೇಳಿ ತಿಳಿದುಕೊಂಡು ನಾನೂ 21 ದಿನದ ಆ ವ್ರತವನ್ನು ಆಚರಿಸಿದೆನು. ಆ ವ್ರತದ ಪ್ರಭಾವದಿಂದ ನೀನು ಈ ಹೊತ್ತಿಗೆ ನನ್ನ ಎದುರಿಗೆ ಬಂದು ನಿಂತಿರುವೆ ಎಂದು ಹೇಳಿದಳು.
ಅದನ್ನು ಕೇಳಿ ಷಣ್ಮುಖನಿಗೆ ಸಂತೋಷವಾಯಿತು. ತಾಯೀ, ಆ ವ್ರತವನ್ನು ಹೇಗೆ ಮಾಡಬೇಕು ? ಎಂದು ನನಗೂ ಹೇಳು, ನನ್ನ ಸ್ನೇಹಿತನೊಬ್ಬನು ಅನ್ನವಿಲ್ಲದೇ, ವಸ್ತ್ರವಿಲ್ಲದೇ ತಿರುಗಾಡುತ್ತಿದ್ದಾನೆ. ಅವನು ಇರುವ ಸ್ಥಳವು ಯಾರಿಗೂ ಗೊತ್ತಿಲ್ಲ ಎಂದು ಹೇಳಲು ಅದಕ್ಕೆ ಪಾರ್ವತಿಯು ದೇವಕನ್ಯೆಯರಿಂದ ಕೇಳಿ ತಿಳಿದುಕೊಂಡ ಅನಂತವೆಂಬ ಗೊಂಬೆಯಿಂದ ತನಗೆ ಹೇಳಲ್ಪಟ್ಟ ಶ್ರೀ ಸಿದ್ದಿ ವಿನಾಯಕನ ಮಹಿಮೆಯನ್ನು ಮತ್ತು ಮಾಡತಕ್ಕಂತಹ ಪೂಜಾ ವಿಧಾನವನ್ನು ಷಣ್ಮುಖನಿಗೆ ಹೇಳುವಂತಾಗುತ್ತಾಳೆ.
ತನ್ನ ತಾಯಿಯಿಂದ ಕೇಳಿ ತಿಳಿದ ಶ್ರೀ ಸಿದ್ಧಿ ಗಣೇಶನ ವ್ರತವನ್ನು ನಿಷ್ಠೆಯಿಂದ 21 ದಿವಸ ಆಚರಿಸುವುದರೊಳಗಾಗಿ ಆತನ ಸ್ನೇಹಿತನು ಬಂದು ಎದುರಿಗೆ ನಿಂತನು. ಆತನು ಷಣ್ಮುಖನಿಗೆ ಇದೇನು ನಿನ್ನ ಕಾರ್ಯ ಎಂದು ಕೇಳಿದನು. ಷಣ್ಮುಖನು ತನ್ನ ತಾಯಿಯಿಂದ ಕೇಳಿ ತಿಳಿದ ಶ್ರೀ ಸಿದ್ಧಿ ಗಣೇಶನ ವೃತವನ್ನು ಮತ್ತು ಮಾಡತಕ್ಕಂತಹ ಪೂಜಾ ವಿಧಾನವನ್ನು ತನ್ನ ಸ್ನೇಹಿತನಿಗೆ ಹೇಳಿದನು.
ಇದನ್ನು ಕೇಳಿದ ಆ ಸ್ನೇಹಿತನು ಶ್ರೀ ಸಿದ್ಧಿ ಗಣೇಶನ ವ್ರತ ಮಾಡಲಿಕ್ಕೆ ಗತಿ ಇಲ್ಲದಿದ್ದರಿಂದ ಚಿಂತೆ ಹಿಡಿದವನಾಗಿ ಒಂದು ಬಾವಿಯ ದಂಡೆಯ ಮೇಲೆ ಮಲಗಿಕೊಂಡನು. ಅಲ್ಲಿಯೇ ಹತ್ತಿರದಲ್ಲಿ ಅತ್ತೆ ಮತ್ತು ಸೊಸೆಯರು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು.
ಅತ್ತೆಯು ಸೊಸೆಗೆ ತೋಟಕ್ಕೆ ಹೋಗಿ ಕಾಯಿಪಲ್ಲೆ ತೆಗೆದುಕೊಂಡು ಬಾ ಎಂದು ಹೇಳಿದಳು. ಅದಕ್ಕೆ ಸೊಸೆಯು ತೋಟದೊಳಗೆ ಏನು ಇದೆಯೆಂದು ತರಲಿ ನಮ್ಮ ತೋಟ ಒಣಗಿ ಹೋಗಿದೆ. ಬಾವಿ ಬತ್ತಿದೆ. ತೋಟದೊಳಗೆ ಯಾವ ಪದಾರ್ಥವೂ ಇಲ್ಲ ಎಂದು ಬಹಳ ದುಃಖದಿಂದ ಹೇಳಿದಳು.
ಇದನ್ನು ಕೇಳಿ ಅತ್ತೆಯು ಮನಸ್ಸಿನಲ್ಲಿಯೇ ಚಿಂತೆ ಹಿಡಿವಳಾಗಿ ಗೆಡ್ಡೆ ಗೆಣಸು ತೆಗೆದುಕೊಂಡು ಬಾರಮ್ಮ ಇವತ್ತಿನ ದಿವಸಕ್ಕಾದರೂ ಆಗಲಿ ಎಂದು ಹೇಳಿದಳು. ಆಗ ಸೊಸೆಯು ಒಂದು ಬುಟ್ಟಿಯನ್ನು ತೆಗೆದುಕೊಂಡು ತೋಟಕ್ಕೆ ಬಂದು ನೋಡುತ್ತಾಳೆ ತೋಟ ತುಂಬಿ ನಂದನವನವಾಗಿದೆ. ಬಾವಿ ತುಂಬಿ ಸೋಸಲಿಕ್ಕೆ ಹತ್ತಿದೆ. ಅವಳಿಗೆ ಆಶ್ವರ್ಯವಾಯಿತು. ತಾನು ದಾರಿ ತಪ್ಪಿ ಯಾರದೋ ತೋಟಕ್ಕೆ ಬಂದಿರುವೆನೋ ಹೇಗೆ ಎಂದು ಭ್ರಮೆಗೊಂಡು ಹಾರುತ್ತ, ಕುಣಿಯತ್ತ ಹಣ್ಣು ಹಂಪಲು, ಕಾಯಿಪಲ್ಲೆ ತೆಗೆದುಕೊಂಡು ನೀರು ಕುಡಿದು ಬೇಗನೇ ಬಾವಿಯ ದಂಡೆಗೆ ಬಂದಳು.
ಅಲ್ಲಿ ಒಬ್ಬ ಸತ್ಪುರುಷನು ಮಲಗಿದ್ದನು. ಅವನನ್ನು ಇಲ್ಲಿ ಏಕೆ ಮಲಗಿರುವಿರಿ ? ಎಂದು ಕೇಳಿದಾಗ ತನ್ನ ವೃತ್ತಾಂತವನ್ನೆಲ್ಲಾ ಹೇಳಿ ಶ್ರೀ ಸಿದ್ಧಿ ಗಣೇಶನ ವ್ರತವನ್ನು ತಾನು ಮಾಡಬೇಕೆಂದು ಮಾಡಿದ್ದು, ಹಣ ಇಲ್ಲದ್ದಕ್ಕೆ ಇಲ್ಲಿ ವಿಚಾರ ಮಾಡುತ್ತಾ ಮಲಗಿದ್ದೇನೆಂದು ಹೇಳಿದನು.
ಅದನ್ನು ಕೇಳಿ ಆ ಸೊಸೆಯು ಸಂತೋಷಗೊಂಡು ಆ ವ್ರತವನ್ನು ಹೇಗೆ ಮಾಡಬೇಕು ? ಮತ್ತು ವ್ರತವನ್ನು ಮಾಡಲಿಕ್ಕೆ ಯಾವ ಸಾಮಾನು ಬೇಕು ? ಎಂದು ಕೇಳಲು ಅದಕ್ಕೆ ಸತ್ಪುರುಷನು ಷಣ್ಮುಖನು ತನಗೆ ಹೇಳಿದ ಶ್ರೀ ಸಿದ್ದಿ ಗಣೇಶನ ಪೂಜೆ ಮಾಡಲಿಕ್ಕೆ ಹಾಲು, ಮೊಸರು, ತುಪ್ಪ, ಕಣಕ, ಬೆಲ್ಲ, ಕಡಲೇಬೇಳೆ ಮುಂತಾದ ಪದಾರ್ಥಗಳು ಬೇಕು ಎಂದು ಹೇಳಿದನು.
ಇದನ್ನು ಕೇಳಿ ತಿಳಿದುಕೊಂಡು ಆ ಸೊಸೆಯು ತನ್ನ ಮನದೊಳಗೇ ನಿಶ್ಚಯ ಮಾಡಿಕೊಂಡು ತಲೆಯ ಮೇಲೆ ಭಾರವಾದ ಬುಟ್ಟಿಯನ್ನು ಹೊತ್ತುಕೊಂಡು ಮನೆಗೆ ಬಂದು ಅತ್ತೆ ಅತ್ತೇ ಬುಟ್ಟಿ ಭಾರವಾಗಿದೆ. ಇಳಿಸಿಕೋಳ್ಳಿ ಎಂದು ಪುನಃ ಹೇಳಿದಳು.
ಅತ್ತೆಯು ಮನೆಯಿಂದ ಹೊರಗೆ ಬಂದು ನೋಡುತ್ತಾಳೆ. ಬುಟ್ಟಿ ತುಂಬ ಹಣ್ಣು ಕಾಯಿಪಲ್ಲೆ ತುಂಬಿರುತ್ತವೆ. ತನ್ನ ಕಣ್ಣುಗಳನ್ನು ತಾನೇ ನಂಬದಾದ ಸ್ಥಿತಿಯಲ್ಲಿ ಅವಳು ಬುಟ್ಟಿಯನ್ನು ತಲೆಯ ಮೇಲಿನಿಂದ ಇಳಿಸಿ, ಹೀಗೆ ಹೇಗೆ ಆಯಿತು ? ನೀನು ಇಲ್ಲಿಂದ ಹೋಗುವಾಗ ಬಾವಿ ಬರಿದಾಗಿದೆ. ತೋಟ ಒಣಗಿ ಹೋಗಿದೆ. ತೋಟದಲ್ಲಿ ಪದಾರ್ಥ ಇಲ್ಲ ಎಂದಿದ್ದೆ ಆದರೆ, ಹೀಗೆ ಹೇಗಾಯಿತು ? ನನಗೆ ಎಲ್ಲವನ್ನು ಸವಿಸ್ತಾರವಾಗಿ ಹೇಳು ಎಂದು ಕೇಳಲು, ಸೊಸೆಯು, ನಮ್ಮ ತೋಟದ ಬಾವಿಯ ಮೇಲೆ ಒಬ್ಬ ಸತ್ಪುರುಷನು ಬಂದು ಮಲಗಿದ್ದಾನೆ. ಅವನು ಶ್ರೀ ಸಿದ್ದಿ ಗಣೇಶನ ವ್ರತ ಮಾಡಬೇಕಾಗಿದೆ. ಆದರೆ, ಆ ವ್ರತವನ್ನು ಮಾಡಲು ಗತಿಯಿಲ್ಲದೇ ಚಿಂತೆಯಿಂದ ಮಲಗಿದ್ದಾನೆ. ಆತನ ಮಹಿಮೆಯಿಂದ ಇಷ್ಟೆಲ್ಲಾ ಆಗಿದೆ ಎಂದು ಹೇಳಿದಳು.
ಆಗ, ಅತ್ತೆಯು ಆ ಸತ್ಪುರುಷನನ್ನು ಕರೆದುಕೊಂಡು ಬಾ. ಅವನಿಗೆ ಶ್ರೀ ಸಿದ್ಧಿ ಗಣೇಶನ ಪೂಜೆ ಮಾಡಲಿಕ್ಕೆ ಬೇಕಾದ ಸಾಮಾನುಗಳನ್ನು ಕೊಡೋಣವೆಂದು ಒಳಗೆ ಹೋಗಿ ನೋಡುತ್ತಾಳೆ. ಹಾಲಿನ ಪಾತ್ರೆಯಲ್ಲಿ ಹಾಲು ತುಂಬಿದೆ. ತುಪ್ಪದ ಪಾತ್ರೆಯಲ್ಲಿ ತುಪ್ಪ ತುಂಬಿದೆ. ಮೊಸರಿನ ಪಾತ್ರೆಯಲ್ಲ ಮೊಸರು ತುಂಬಿದೆ ಇದನ್ನು ನೋಡಿ ಅತ್ತೆಗೆ ಪರಮಾಶ್ಚರ್ಯವಾಯಿತು.
ಸೊಸೆಯು ಆ ಸತ್ಪುರುಷನನ್ನು ಕರೆದುಕೊಂಡು ಬಂದು ಆತನಿಗೆ ಪೂಜೆ ಮಾಡಲಿಕ್ಕೆ ಬೇಕಾದ ಪದಾರ್ಥಗಳನ್ನು ಕೊಟ್ಟು ಆತನಿಂದ 21 ದಿನ ಶ್ರೀ ಸಿದ್ದಿ ಗಣೇಶನ ವ್ರತ ಮಾಡಿಸಿ ಬ್ರಾಹ್ಮಣರಿಗೆ ಮತ್ತು ಮುತ್ತೈದೆಯರಿಗೆ ಊಟಕ್ಕೆ ಹಾಕಿ ಬಹಳ ಸಂಭ್ರಮದಿಂದ ವ್ರತವನ್ನು ನೆರವೇರಿಸಿ, ಪ್ರಸಾದವನ್ನು ಸ್ವೀಕಾರ ಮಾಡಿದರು.
ಎಲ್ಲರೂ ಸಂತೋಷದಿಂದ ಮೈಮರೆತಿರಲು ಹೊರಗಡೆ ಭಜನೆ, ಓಲಗದ ಸಪ್ಪಳ ಕೇಳಿಸತೊಡಗಿತು. ಆಗ ಎಲ್ಲರೂ ಇದೇನೆಂದು ನೋಡಲು ಹೊರಗಡೆ ಬಂದರು. ಅತ್ತೆಯು ಸಂಭ್ರಮದಿಂದ ಬರತಕ್ಕ ಆ ಮೆರವಣಿಗೆಯನ್ನು ನಿರೀಕ್ಷಿಸುತ್ತಿದ್ದಾಗ ಅಲ್ಲಿ ನಿಂತ ಒಬ್ಬನನ್ನು ಅಯ್ಯಾ ಏನು ಸಮಾಚಾರ ? ಇಷ್ಟು ಜನ ಏಕೆ ಸೇರಿದ್ದಾರೆ. ? ಏತಕ್ಕೋಸ್ಕರ ಈ ಮೆರವಣಿಗೆ ನಡೆಯುತ್ತಿದೆ ? ಎಂದು ಕೇಳಲು, ಅದಕ್ಕೆ ಆ ಮನುಷ್ಯನು ಅಮ್ಮಾ ನಿಮಗೆ ಗೊತ್ತಿಲ್ಲವೇ ಈ ಊರಿನ ರಾಜನು ಕಾಲವಾಗಿರುತ್ತಾನೆ. ಆತನ ಉತ್ತರಾಧಿಕಾರಿಗಳು ಯಾರೂ ಇರುವುದಿಲ್ಲ. ಕಾರಣ ಆನೆಯ ಸೊಂಡಿಲಿನಲ್ಲಿ ಹೂವಿನ ಹಾರವನ್ನು ಕೊಟ್ಟಿರುತ್ತಾರೆ. ಆನೆಯು ಯಾರ ಕೊರಳಿಗೆ ಮಾಲೆಯನ್ನು ಹಾಕುತ್ತದೆಯೋ ಅವರನ್ನೇ ಆ ಊರಿನ ರಾಜನನ್ನಾಗಿ ಮಾಡಬೇಕೆಂದು ಮೆರವಣಿಗೆ ನಡೆಸಿದ್ದಾರೆ. ಎಂದು ಹೇಳುವಷ್ಟರಲ್ಲಿಯೇ ಮಾಲೆಯನ್ನು ಹಿಡಿದಿರತಕ್ಕಂತಹ ಆನೆಯು ಆಚೆ ಈಚೆ ನೋಡದೇ ಆ ಮನೆಯ ಎದುರಿಗೆ ಬಂದು ಷಣ್ಮುಖನ ಸ್ನೇಹಿತನ ಕೊರಳಿಗೆ ಆ ಮಾಲೆಯನ್ನು ಹಾಕಿತು.
ಎಲ್ಲರೂ ಜಯಘೋಷಣೆ ಮಾಡಲಾರಂಭಿಸಿದರು. ಮಹಾರಾಜನಿಗೆ ಜಯವಾಗಲಿ. ಇಂದಿನಿಂದ ಈತನೇ ನಮ್ಮ ಮಹಾರಾಜನೆಂದು ಜಯಘೋಷಣೆ ಮಾಡುತ್ತಾ ಆತನನ್ನು ಅಂಬಾರಿಯ ಮೇಲೆ ಕೂಡ್ರಿಸಿಕೊಂಡು ಮೆರವಣಿಗೆ ಮೂಲಕ ರಾಜಭವನಕ್ಕೆ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿ, ಪಟ್ಟಭೀಷೇಕವನ್ನು ಮಾಡಿ, ರಾಣಿಯನ್ನು ತಂದು ಲಗ್ನ ಮಾಡಿದರು.
ರಾಜ ಮತ್ತು ರಾಣಿಯನ್ನು ಮುಕ್ತ ಕಂಠದಿಂದ ಹೊಗಳುತ್ತಾ ರಾಜನಿಂದ ಸಂಭಾವನೆಗಳನ್ನು ಸ್ವೀಕರಿಸಿ, ತಮ್ಮ ತಮ್ಮ ಮನೆಗಳಿಗೆ ತೆರಳುವಂತಾದರು.
ಇತ್ತ ರಾಜನು ರಾಣಿಗೆ ಹೇ ರಾಣಿಯೇ ಕೇಳು, ನಾನು ಈ ಹಿಂದೆ ಶ್ರೀ ಸಿದ್ಧಿ ಗಣೇಶನ ವ್ರತ ಮಾಡಿದ್ದರಿಂದ ನನಗೆ ಇಂತಹ ಪದವಿಯು ಬಂದಿರುತ್ತದೆ. ಆದ್ದರಿಂದ ನೀನೂ ಕೂಡ ಈ ವ್ರತವನ್ನು ಮಾಡುವವಳಾಗು ಎನ್ನಲು ಅದಕ್ಕೆ ರಾಣಿಯುಎಂದು ಉಲ್ಲಂಘನೆ ಮಾಡಿದಳು.
ಅದಕ್ಕೆ ರಾಜನು ನಿನ್ನ ಇಷ್ಟ ಬಂದ ಹಾಗೆಯೇ ಮಾಡಿಕೋ ಎಂದು ಹೇಳಿ ಅಲ್ಲಿ ನಿಲ್ಲದೇ ಹೊರಟು ಹೋದನು. ಅದೇ ದಿನ ರಾತ್ರಿ ರಾಜನ ಕನಸಿನಲ್ಲಿ ಶ್ರೀ ಸಿದ್ಧಿ ಗಣೇಶನು ಕಾಣಿಸಿಕೊಂಡು ಹೇ ರಾಜನೇ ! ನಿನಗೆ ರಾಣಿ ಬೇಕೋ, ರಾಜ್ಯ ಬೇಕೋ ? ಎಂದು ಕೇಳಲು, ರಾಜನು ಹೇ ಸ್ವಾಮಿ ನನಗೆ ರಾಜ್ಯ ಬೇಕು, ರಾಣಿ ಬೇಕಿಲ್ಲ ಎಂದನು.
ಅದಕ್ಕೆ ಶ್ರೀ ಸಿದ್ಧಿ ಗಣೇಶನು ಹಾಗಾದರೆ ನಿನ್ನ ರಾಣಿಯನ್ನು ಕಣ್ಣು ಕಟ್ಟಿ ಅಡವಿಯಲ್ಲಿ ಬಿಟ್ಟು ಬಾ ಎಂದನು. ಅದಕ್ಕೆ ರಾಜನು ಹೇಗೆ ಬಿಟ್ಟು ಬರಲಿ ? ಎಂದು ಕೇಳಿದನು.
ಆಗ ಸಿದ್ಧಿ ವಿನಾಯಕನು ನಾಳೆ ವನಭೋಜನಕ್ಕೆಂದು ಹೇಳಿ ಬಂಧು, ಜನರನ್ನು ಕರೆದುಕೊಂಡು ಹೋಗು, ಆಗ ಎಲ್ಲರದೂ ಊಟವಾದ ಮೇಲೆ ರಾಣಿಗೆ ನಿದ್ದೆ ಬರುತ್ತದೆ. ಆಗ ಅವಳನ್ನು ಅಲ್ಲಿಯೇ ಬಿಟ್ಟು ಬಾ ಎಂದು ಹೇಳಿ ಅಂತರ್ಧಾನನಾದನು.
ಮರುದಿನ ರಾಜನು ವನಭೋಜನಕ್ಕೆಂದು ತನ್ನ ರಾಣಿ ಹಾಗೂ ಪರಿವಾರ ಸಮೇತ ಅಡವಿಗೆ ಬಂದನು. ಎಲ್ಲರೂ ಉಂಡು, ತಿಂದು ಸುಖದಿಂದ ಮಾತನಾಡುತ್ತಿರಲಿ ರಾಣಿಗೆ ಮಹತ್ತರವಾದ ನಿದ್ದೆ ಬಂದಿತು. ಆಗ ರಾಜನು ರಾಣಿಯನ್ನು ಅಲ್ಲಿಯೇ ಬಿಟ್ಟು ಹೋಗುವಾಗ ಆತನಿಗೆ ಎಲ್ಲಿಲ್ಲದ ದುಃಖವು ಪ್ರಾಪ್ತವಾಯಿತು.
ಹತ್ತು ಹೆಜ್ಜೆ ಮುಂದೆ, ಹತ್ತು ಹೆಜ್ಜೆ ಹಿಂದೆ ತಿರುಗಿ ಗಿರುಗಿ ನೋಡುತ್ತಾ ಭಾರವಾದ ಮನಸ್ಸಿನಿಂದ ತನ್ನ ರಾಜ್ಯವನ್ನು ತಲುಪಿದನು. ಇತ್ತ ರಾಣಿಯು ನಿದ್ದೆಯಿಂದ ಎದ್ದು, ನೋಡಲಾಗಿ ತನ್ನ ಜೊತೆಗೆ ಬಂದಿರತಕ್ಕಂತಹ ರಾಜನಾಗಲೀ, ಪರಿವಾರವಾಗಲೀ ಕಾಣದ್ದರಿಂದ ಗಾಬರಿಗೊಳಗಾಗಿ ಅಳಲು ಪ್ರಾರಂಭಿಸಿದಳು.
ಅಲ್ಲಿರುವ ಗಿಡ, ಮರಗಳನ್ನು, ಪಕ್ಷಿ ಹಕ್ಕಿಗಳನ್ನು ಅಂಗಲಾಚಿ ಬೇಡುವಂತವಳಾಗುತ್ತಾಳೆ. ಆಕೆ ಪತಿಯನ್ನು ಹೀನತೆಯಿಂದ ಹೇ ಸ್ವಾಮಿ ನನ್ನನ್ನು ಹೇಗೆ ಇಂಥ ದಟ್ಟ ಅರಣ್ಯದಲ್ಲಿ ಬಿಟ್ಟು ಬಿಟ್ಟಿರಿ ? ಎಂದು ಆರ್ತನಾದ ಮಾಡುತ್ತಿರುವಾಗ ಅಲ್ಲಿಯೇ ಒಬ್ಬ ಗೋಸ್ವಾಮಿಯ ಮಠವಿತ್ತು. ಅದರಲ್ಲಿ ಒಬ್ಬ ಗೋಸ್ವಾಮಿಯು ವಾಸವಾಗಿದ್ದನು.
ಆತನು ಇಂತಹ ದಟ್ಟ ಅರಣ್ಯದಲ್ಲಿ ಯಾರದೋ ಸ್ತ್ರೀ ಧ್ವನಿಯು ಕೇಳಿ ಬರುತ್ತಿದೆ ಅಲ್ಲಿ ಯಾರು ಇರಬಹುದು ? ಎಂದು ನೋಡಲಿಕ್ಕೆ ಹೊರಗೆ ಬಂದನು ಅಷ್ಟರಲ್ಲಿ ಅಲ್ಲಿ ಬರುತ್ತಿದ್ದ ರಾಣಿಯನ್ನು ಕುರಿತು ತಾಯಿ ನೀನು ಯಾರು ? ಇಲ್ಲಿ ಒಬ್ಬಳೇ ಬರಲು ಕಾರಣವೇನು ? ಎಂದು ಕೇಳಲು, ಅದಕ್ಕೆ ರಾಣಿಯು ಏನು ಹೇಳಲಿ ಪೂಜ್ಯರೇ, ನಾನು ರಾಣಿ ಇz್ದÉೀನೆ. ರಾಜನು ನನ್ನನ್ನು ಬಿಟ್ಟು ಹೋಗಿದ್ದಾನೆ. ನಾನು ಯಾವ ಅಪರಾಧವನ್ನು ಎಸಗಿರುವೆನೋ ತಿಳಿಯಲಿಲ್ಲ. ಎಂದು ಹೇಳಲು ಆ ಗೋಸ್ವಾಮಿಯು ಬಾ ಅಮ್ಮ ನನ್ನ ಮನೆಯಲ್ಲಿ ಇರು. ನನ್ನ ಮಗಳು ಹಾಗೆ ನಿನ್ನನ್ನು ಪೋಷಣೆ ಮಾಡುತ್ತೇನೆ ಎಂದು ರಾಣಿಗೆ ಸಮಾಧಾನವನ್ನು ಹೇಳಿ ತನ್ನ ಮನೆಯಲ್ಲಿ ಇರಿಸಿಕೊಂಡನು.
ಮರುದಿನ ಗೋಸ್ವಾಮಿಯು ಭಿಕ್ಷೆಗೆ ಹೋದಾಗ ದಿನ ನಿತ್ಯ ಹುಟ್ಟುವ ಭಿಕ್ಷೆಯು ಕೂಡ ಹುಟ್ಟಲಿಲ್ಲ. ನಿನಗೇನು ಹಾಕಲಿ ? ನಾನೇನು ತಿನ್ನಲಿ ? ಇದೇ ಚಿಂತೆಯಿಂದ ಮನೆಗೆ ಬಂದೆನಮ್ಮ ಎಂದು ಹೇಳುತ್ತಿರಲು ರಾಣಿಯು ಬಹಳ ದುಃಖದಿಂದ ಅಳಲು ಪ್ರಾರಂಭಿಸಿದಳು.
ಆಗ ಗೋಸ್ವಾಮಿಯು ಅಮ್ಮ ಅಳಬೇಡ, ಇದಕ್ಕೆಲ್ಲಾ ಏನು ಕಾರಣ ? ಎಂದು ತಿಳಿಯೋಣ ಸಗಣಿಯನ್ನು ತೆಗೆದುಕೊಂಡು ಬಾ. ಶಕುನವನ್ನು ನೋಡುತ್ತೇನೆ ಎನ್ನಲು ರಾಣಿಯು ಸಗಣಿಯನ್ನು ತಂದು ಕೊಡಲು ಶಕುನವನ್ನು ನೋಡಲಾಗಿ ಅಮ್ಮಾ ನೀನು ಶ್ರೀ ಸಿದ್ಧಿ ಗಣೇಶನ ಉಲ್ಲಂಘನೆ ಮಾಡಿರುತ್ತೀ. ಆದ್ದರಿಂದ ನಿನಗೆ ಇಂತಹ ದುರ್ಗತಿಯು ಪ್ರಾಪ್ತವಾಯಿತು. ನಿನ್ನ ದೆಸೆಯಿಂದ ಈ ದಿನ ನನಗೆ ದಿನನಿತ್ಯ ಹುಟ್ಟುವ ಭಿಕ್ಷೆ ಕೂಡ ಹುಟ್ಟಲಿಲ್ಲ. ಈಗಲಾದರೂ ಸಂಕಲ್ಪ ಮಾಡುವಂತವಳಾಗು ಎಂದನು.
ಇತ್ತ ರಾಜನ ಕನಸಿನಲ್ಲಿ ಶ್ರೀ ಸಿದ್ಧಿ ಗಣೇಶನು ಕಾಣಿಸಿಕೊಂಡು ರಾಣಿಯನ್ನು ಮರಳಿ ಅರಮನೆಗೆ ಕರೆದುಕೊಂಡು ಬಾ ಎನ್ನಲು ರಾಜನು ಹೇ ಸ್ವಾಮಿ ನೀನು ಆಗ ಅಡವಿಯಲ್ಲಿ ಬಿಟ್ಟು ಬಾ ಎಂದೆ, ಬಿಟ್ಟು ಬಂದೆ ಈಗ ಕರೆದುಕೊಂಡು ಬಾ ಅನ್ನುತ್ತಿ. ಹೇಗೆ ದರೆದುಕೊಂಡು ಬರಲಿ ? ಅಡವಿಯಲ್ಲಿ ಹುಲಿ-ಕರಡಿ ಏನಾದರೂ ತಿಂದು ಬಿಟ್ಟವೋ ಏನೋ, ಹೇಗೆ ಮಾಡಲಿ ? ಎಂದು ಕೇಳಲು ಅದಕ್ಕೆ ಶ್ರೀ ಸಿದ್ಧಿ ಗಣೇಶನು ಹೇ ರಾಜ ನೀನು ಯಾವ ಚಿಂತೆಯನ್ನೂ ಮಾಡಬೇಡ. ಅಡವಿಯಲ್ಲಿ ಒಂದು ಗೋಸ್ವಾಮಿಯ ಮಠವಿದೆ. ಅಲ್ಲಿ ನಿನ್ನ ರಾಣಿ ಸುಖವಾಗಿದ್ದಾಳೆ. ಕರೆದುಕೊಂಡು ಬಾ ಎಂದು ಹೇಳಿ ಅದೃಶ್ಯನಾದನು.
ಅದೇ ಪ್ರಕಾರ ರಾಜನು ನಸುಕಿನಲ್ಲಿ ತನ್ನ ಪರಿವಾರ ಸಮೇತ ರಾಣಿಯನ್ನು ಕರೆದುಕೊಂಡು ಬರಲು ಗೋ ಸ್ವಾಮಿಯು ಮಠಕ್ಕೆ ಬಂದನು. ಅಲ್ಲಿ ಗೋ ಸ್ವಾಮಿಯು ರಾಜನು ಬಂದಿದ್ದನ್ನು ಕಂಡು ತನ್ನನ್ನು ಹಿಡಿಯಲಿಕ್ಕೆ ಬಂದಿದ್ದಾನೆಂದು ತಿಳಿದು ಹೆದರಿ ಓಡಲಿಕ್ಕೆ ಪ್ರಾರಂಭಿಸಿದನು. ಅದಕ್ಕೆ ರಾಜನು ಅವನಿಗೆ ಅಭಯವನ್ನು ನೀಡಿದನು. ಆತನಿಗೆ ನನ್ನ ರಾಣಿಯನ್ನು ಕಳಿಸಿಕೊಡಪ್ಪಾ ಎಂದನು.
ಅದಕ್ಕೆ ಗೋಸ್ವಾಮಿಯು ಹೇ ರಾಜ ! ನಿನ್ನ ಹೆಂಡತಿಯನ್ನು ಇಷ್ಟು ದಿವಸ ನನ್ನ ಮನೆಯಲ್ಲಿ ನನ್ನ ಮಗಳ ಹಾಗೆ ಸಾಕಿದ್ದೇನೆ.. ನಾನು ಹೇಗೆ ಕಳಿಸಿಕೊಡಲಿ ? ಬಹಳ ದುಃಖವಾಗುತ್ತದೆ. ಉಪಾಯವಿಲ್ಲ. ಹೆಣ್ಣು ಮಕ್ಕಳು ಎಂದಾದರೂ ಗಂಡನ ಮನೆಗೆ ಹೋಗಲೇಬೇಕಲ್ಲವೇ ? ನನ್ನ ಮನೆಯಲ್ಲಿ ಹರಕು-ಮುರುಕು ಬಟ್ಟೆಯಿವೆ. ಕಟ್ಟಿಕೊಡುತ್ತೇನೆ. ನಿನ್ನ ಜೊತೆಗೆ ಕರೆದುಕೊಂಡು ಹೋಗು ಎಂದು ರಾಣಿಯನ್ನು ಬಹಳ ದುಃಖ ತುಂಬಿದ ಹೃದಯದಿಂದ ಕಳಿಸಿಕೊಟ್ಟನು.
ಗೋಸ್ವಾಮಿಯಿಂದ ಬೀಳ್ಕೊಂಡ ರಾಜನು ರಾಣಿಯ ಸಮೇತ ಬರುತ್ತಿರುವಾಗ ದಾರಿಯಲ್ಲಿ ಒಂದು ಸುಂದರವಾದ ಬಾವಿಯು ಕಾಣಲು ರಾಜನು ರಾಣಿಗೆ ನಿನ್ನ ತಂದೆ ಕೊಟ್ಟ ಬುತ್ತಿ ಗಂಟನ್ನು ಬಿಚ್ಚು ಇಬ್ಬರೂ ಕೂಡಿ ಊಟ ಮಾಡಿಕೊಂಡು ಹೋಗೋಣ ಎಂದನು.
ಅದಕ್ಕೆ ರಾಣಿಯು ಹೇ ಸ್ವಾಮಿ, ನನ್ನ ತಂದೆಗೆ ನಿಮಗೆ ಕೊಡುವ ಯೋಗ್ಯತೆ ಎಲ್ಲಿಂದ ಬರಬೇಕು ? ಎನ್ನಲು ಅದಕ್ಕೆ ಏನು ಅಭ್ಯಂತರವಿಲ್ಲ ಕೊಡು ನನಗೆ ಬಹಳ ಹಸಿವೆಯಾಗುತ್ತಿದೆ ಎಂದಾಗ ರಾಣಿಯು ಗಂಟು ಬಿಚ್ಚಿ ನೋಡುತ್ತಾಳೆ. ಹರಕು, ಮುರುಕು ಬಟ್ಟೆ ಹೋಗಿ ಪಂಚಾಮೃತವಾಗಿದೆ. ಆಗ ಎಲ್ಲರೂ ಶ್ರೀ ಸಿದ್ಧಿ ಗಣೇಶನ ಮಹಿಮೆಯನ್ನು ಕೊಂಡಾಡಿದರು.
ಅರಮನೆಗೆ ಬಂದ ನಂತರ ಶ್ರೀ ಸಿದ್ದಿ ಗಣೇಶನನ್ನು ಸಿಂಹಾಸನದ ಮೇಲೆ ಕೂರಿಸಿ, ಮುತ್ತೈದೆಯರಿಗೆ ದಾನ, ಧರ್ಮಗಳನ್ನು ಕೊಟ್ಟು ನಮ್ಮ ರಾಜ್ಯದಲ್ಲಿ ಯಾರು ಹಸಿದಿದದಾರೋ, ಮತ್ತು ಯಾರು ಬಳಲಿದ್ದಾರೋ ನೋಡಿಕೊಂಡು ಬನ್ನಿ ಎಂದು ರಾಣಿ ಹೇಳಲು ಅದಕ್ಕೆ ಮಂತ್ರಿಯು ಊರ ತುಂಬ ನೋಡಲಾಗಿ ಎಲ್ಲರೂ ಉಂಡು, ತಿಂದು ಸುಖದಿಂದ ಇದ್ದರು. ಊರ ಹೊರಗೆ ಒಬ್ಬ ಬಡ ಬ್ರಾಹ್ಮಣನ ಹೆಂಡತಿ ಅಳುತ್ತಾ ಕುಳಿತಿದ್ದಳು. ಅಲ್ಲಿಗೆ ಮಂತ್ರಿಯು ಬಂದು ! ಅಮ್ಮಾ, ರಾಣಿಯು ಶ್ರೀ ಸಿದ್ಧಿ ಗಣೇಶನ ಪೂಜೆಯನ್ನು ಮಾಡುತ್ತಾಳೆ. ತಾವು ಬರಬೇಕೆಂದು, ಮಹಾರಾಣಿಯವರ ಅಪ್ಪಣೆಯಾಗಿದೆ ಎಂದನು.
ಅದಕ್ಕೆ ಆ ಬ್ರಾಹ್ಮಣನ ಹೆಂಡತಿಯು ಹೇಗೆ ಬರಲಿ ಮಂತ್ರಿಗಳೇ ನನ್ನ ಗಂಡನಿಗೆ ಕಾಯಿಲೆ ಜೋರಾಗಿದೆ. ಈಗಲೋ ಆಗಲೋ ಪ್ರಾಣ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದ ಏಳು ಮಕ್ಕಳೂ ಬಂದೀಖಾನೆ ಸೇರಿದ್ದಾರೆ. ಏಳು ಕೊಪ್ಪರಿಗೆ ಹೊನ್ನು ಸಮುದ್ರದಲ್ಲಿ ಬಿದ್ದಿದೆ ಎಂದಳು. ಬ್ರಾಹ್ಮಣನ ಹೆಂಡತಿಯ ದುಃಖವನ್ನು ಕೇಳಿದ ಮಂತ್ರಿಯು ತಕ್ಷಣವೇ ರಾಣಿಗೆ ಈ ವಿಷಯವನ್ನು ತಿಳಿಸಿದನು. ಇದನ್ನು ಕೇಳಿದ ರಾಣಿಯು ಆ ಬ್ರಾಹ್ಮಣನ ಹೆಂಡತಿಯ ಕೈಯಲ್ಲಿ ಶ್ರೀ ಸಿದ್ಧಿ ಗಣೇಶನ ಪೂಜೆ ಮಾಡಲು ತಿಳಿಸಿ, ಶ್ರೀ ಸಿದ್ಧಿ ಗಣೇಶನ ಮಂತ್ರಾಕ್ಷತೆಯನ್ನು ಅವಳ ಕೈಯಲ್ಲಿ ಹಾಕಿದಳು.
ಅವಳು ಆ ವ್ರತವನ್ನು ಮಾಡುವುದರೊಳಗಾಗಿ ಆಕೆಯ ಗಂಡನಿಗೆ ಕಾಯಿಲೆ ಕಡಿಮೆಯಾಗಿ ಶ್ರೀ ಸಿದ್ಧಿ ಗಣೇಶನ ಮಹಿಮೆಯಿಂದ ಹದಿನೆಂಟು ವರುಷ ಪ್ರಾಯದವನಾದನು. ಏಳು ಜನ ಮಕ್ಕಳು ಬಂದೀಖಾನೆ ಬಿಟ್ಟು ಬಂದರು. ಏಳು ಕೊಪ್ಪರಿಗೆ ಹೊನ್ನು ಕೈವಶವಾಯಿತು. ಹೀಗೆ ಬಡ ಬ್ರಾಹ್ಮಣನ ಸಂಸಾರ ರಾಣಿಯ ಮೂಲಕ ಚಿಗುರಿದ ನಂದನವನವಾಯಿತು.
ಈ ಕಥೆಯನ್ನು ತಪ್ಪದೇ, ರವಿವಾರ, ಮಂಗಳವಾರ, ಗುರುವಾರ ಯಾರು ಹೇಳುತ್ತಾರೋ, ಯಾರು ಕೇಳುತ್ತಾರೋ ಅವರಿಗೆ ಶ್ರೀ ಸಿದ್ಧಿ ಗಣೇಶನು ಒಲಿದು, ಅವರ ಸಂಕಲ್ಪ ಇಷ್ಟಾರ್ಥಗಳನ್ನು ಕೊಟ್ಟು ರಕ್ಷಿಸುವನು.
ಶ್ರೀ ಸಿದ್ಧಿ ಗಣೇಶಾಯ ನಮಃ
ಇತಿ ಶ್ರೀ ಸಿದ್ಧಿ ವಿನಾಯಕ ಕಥಾ ಸಂಪೂಣಂ